ಪ್ರಶಾಂತವನ

by Prasad Krishna last modified Mar 20, 2016 04:32 AM
ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಎರಿಕ್ ಮೆಥಾಯಿಸ್ ಸಭಾಂಗಣದಲ್ಲಿ ನಡೆದ ವಿಕಿಪೀಡಿಯ ೧೩ನೇ ವರ್ಷಾಚರಣೆಯ ಬಗ್ಗೆ ಒಂದು ವರದಿ

The blog post was published in Prashasti Prashantavanam on February 21, 2016.


ಲಾಸ್ಯ ಶೆಟ್ಟಿಯವರ ನಿರೂಪಣೆಯ ವರ್ಷಾಚರಣಾ ಕಾರ್ಯಕ್ರಮ ಶುರುವಾದದ್ದು "ಹೊಸ ಹಾದಿಯನು ಹಿಡಿದು ನಡೆಯಣ್ಣ ಮುಂದೆ.." ಎಂಬ ರೋಹಿತ್ , ಗೋಪಾಲಕೃಷ್ಣ ಮತ್ತು ತಂಡದವರಿಂದ. ಮುಂದುವರಿಯುವುದಕ್ಕೆ ಮುಂಚೆ ವೇದಿಕೆಯನ್ನು ಅಲಂಕರಿಸಿದ ಗಣ್ಯರ ಬಗ್ಗೆ ಒಂದೆರಡು ನುಡಿಗಳನ್ನಾದರೂ ಹೇಳಲೇಬೇಕಾಗುತ್ತೆ.ಕನ್ನಡ ವಿಕಿ ಬಳಸುವವರಿಗೆಲ್ಲಾ ಅದರಲ್ಲಿನ ಕೆ.ಪಿ.ರಾವ್ ಕೀಲಿಮಣೆಯ ಪರಿಚಯವಿದ್ದೇ ಇರುತ್ತೆ. ಕನ್ನಡವೊಂದೇ ಅಲ್ಲದೇ ಅನೇಕ ಭಾರತೀಯ ಭಾಷೆಗಳ ಭಾರತೀಯ ಭಾಷೆಗಳ ಲಿಪಿಗಳನ್ನು ಗಣಕಕ್ಕೆ ಅಳವಡಿಸಿದ ಗಣಕ ವಿಜ್ಞಾನಿ ನಾಡೋಜ ಕೆ.ಪಿ ರಾವ್ ಅವರು ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ.ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿ ಶ್ರೀ ವಸಂತಕುಮಾರ ಪೆರ್ಲ. ಇವರು ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕರು ಮತ್ತು ಕನ್ನಡ ಪದಗಳ ಸೃಷ್ಠಿಗಾಗಿ ಪದಾರ್ಥಚಿಂತಾಮಣಿಯಂತಹ ಮುಖಹೊತ್ತಿಗೆಯ ಗುಂಪುಗಳಲ್ಲಿ ತೊಡಗಿಸಿಕೊಂಡವರು. ಕಾರ್ಯಕ್ರಮದ ಮೂರನೇ ಮುಖ್ಯ ಅತಿಥಿ  ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಹಣಾಧಿಕಾರಿ ,ಮಂಗಳೂರಿನ ಹಿಂದಿನ ಪ್ರಭಾರಿ ಜಿಲ್ಲಾಧಿಕಾರಿಗಳಾಗಿದ್ದ S.A ಪ್ರಭಾಕರ ಶರ್ಮ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ಸ್ವೀಬರ್ಟ್ ಡಿ’ಸಿಲ್ವ ಅವರು. ಇದಲ್ಲದೇ ವೇದಿಕೆಯನ್ನಲಕಂರಿಸಿದ ಗಣ್ಯರೆಂದರೆ ಸಂತ ಅಲೋಷಿಯಸ್ ಕಾಲೇಜಿನ ಬಿ.ಸಿ.ಎ ವಿಭಾಗದ ಮುಖ್ಯಸ್ಥರಾದ ಡಾ| ರವೀಂದ್ರಸ್ವಾಮಿ ಅವರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಸರಸ್ವತಿ ಅವರು ಮತ್ತು ಕಾರ್ಯಕ್ರಮ ವ್ಯವಸ್ಥಾಪಕರಾದ ಡಾ| ಯು.ಬಿ.ಪವನಜ ಮತ್ತು ಹದಿಮೂರನೆಯ ವರ್ಷಾಚರಣೆಯ ಸಂಚಾಲಕರಾದ ಡಾ| ವಿಶ್ವನಾಥ ಬದಿಕಾನ ಅವರು.

ಶ್ರೀ ವಿಶ್ವನಾಥ ಬದಿಕಾನ ಅವರ ಸ್ವಾಗತ ಮತ್ತು ಪ್ರಾಸ್ತಾವಿಕ ನಂತರ ಕಾರ್ಯಕ್ರಮದ ಉದ್ಘಾಟನೆಯಾಗಿದ್ದು ನಾಡೋಜ ಕೆ.ಪಿ.ರಾವ್ ಅವರಿಂದ.  ನಂತರ ಕೆ.ಪಿ.ರಾವ್ ಅವರಿಗೆ ಸನ್ಮಾನ ಕಾರ್ಯಕ್ರಮ. ಸನ್ಮಾನ ಕಾರ್ಯಕ್ರಮದ ನಂತರ ಮಾತನಾಡಿದ ರೆವರೆಂಡ್ ಫಾದರ್ ಡಿಸಿಲ್ವ ಅವರು ಕಾಲೇಜಿನ ಇತಿಹಾಸದ ಬಗ್ಗೆ, ಕನ್ನಡ ಸಾಹಿತ್ಯಕ್ಕೆ ಕಾಲೇಜಿನ ಕೊಡುಗೆಗಳ ನಡೆ, ಕನ್ನಡಕ್ಕಾಗಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಮತ್ತು ಕನ್ನಡ ವಿಕಿಪೀಡಿಯ ಬಗ್ಗೆಯೂ ತಮ್ಮ ಮೆಚ್ಚುಗೆಯ ನುಡಿಗಳನ್ನು ವ್ಯಕ್ತಪಡಿಸಿದರು.

ನಂತರ ಕೆ.ಪಿ.ರಾವ್ ಅವರು ಎರಡು ಪ್ರಶ್ನೆಗಳಿಗೆ ಉತ್ತರ ಹುಡುಕುವಂತಹ ಹಾದಿಯಲ್ಲಿನ ಶುಭನುಡಿಗಳು ನೆರೆದವರ ಗಮನ ಸೆಳೆಯುವಂತಿದ್ದವು.

ಕನ್ನಡ ವಿಕಿಪೀಡಿಯ ಏಕೆ ಬೇಕು ? ಅನ್ನುವ ಪ್ರಶ್ನೆಗೆ ಮೂರು ಉತ್ತರ ಹುಡುಕುವ ಹಾದಿಯಲ್ಲಿ ಸಾಗಿದ ಅವರ ಅಭಿಪ್ರಾಯದಲ್ಲಿ ೧.ಕನ್ನಡ ಲಿಪಿ ಮಾತ್ರ ಬಲ್ಲವರಿಗೆ ಜಗದ ಜ್ಞಾನ ತಿಳಿಸಿಕೊಡಬಲ್ಲ ಸುಲಭದ ಮಾಧ್ಯಮ ವಿಕಿಪೀಡಿಯ  ೨. ಕನ್ನಡಕ್ಕೆ ಮಾತ್ರ ಸಂಬಂಧಿಸಿದ ವಿಷಯಗಳು ,ಸಂಸ್ಕೃತಿ,ಭಾಷಾ ಸೊಗಡು ಬೇರೆ ಭಾಷೆಯ ವಿಕಿಯಲ್ಲಿ ಅಷ್ಟು ಸಮಂಜಸವಾಗಿ/ಪೂರ್ಣವಾಗಿ ಮೂಡಿಬರಲು ಸಾಧ್ಯವಿಲ್ಲ.

೩. ಯಾರಿಗಾದರೂ ಗೌರವ ಕೊಡಲು ಬಳಸಬಹುದಾದ ರು,ರಿಗೆ(ರಾಯರು,ರಾಯರಿಗೆ) ಯಂತಹ ಭಾಷಾ ವೈಶಿಷ್ಟ್ಯವನ್ನು ಹೊಂದಿದ ಕನ್ನಡಕ್ಕೆ ತನ್ನದೇ ವಿಕಿಪೀಡಿಯವಿರಬೇಕಾದ ಅಗತ್ಯವಿದೆ.

ಮುಂದುವರಿಸಿದ ಅವರು ಕನ್ನಡಕ್ಕೆ ಭಾಷಾಂತರದ ಬದಲು ರೂಪಾಂತರ ಮಾಡುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದರು.ವಿಕಿಪೀಡಿಯ ಮೂಲಕವಾದರು ಕನ್ನಡ ಪದಬಳಕೆಯಲ್ಲೊಂದು ಸಮಾನತೆ ಬರಲೆಂಬ ಆಶಯವನ್ನೂ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮುಖ್ಯ ಅತಿಥಿಗಳಾದ ವಸಂತಕುಮಾರ್ ಪೆರ್ಲ ಅವರು ಶಿಲಾಲೇಖ--> ತಾಮ್ರ ಪಟ-->ತಾಳೆಗರಿ-->ಪುಸ್ತಕದ ರೂಪದಲ್ಲಿದ್ದ ಸಾಹಿತ್ಯ ಈಗ Digitial ಅವತರಣಿಕೆಯಾಗಿ ಬೆಳೆದು ಬಂದ ಪರಿಯ ಬಗ್ಗೆ ತಿಳಿಸಿದರು. ಕರಾವಳಿಯಲ್ಲಿರುವ ಹವ್ಯಕ, ಬ್ಯಾರಿ,ತುಳು,ಕೊಂಕಣಿ, ಮಲೆಯಾಳಂ,ಮರಾಠ,ಕರಾಡ, ಬೆಸ್ತರ ಹಲವು ಉಪಭಾಷೆಗಳ ರೂಪದಲ್ಲಿರುವ ಭಾಷಾ ಸೊಗಡನ್ನು, ನಮ್ಮ ರೀತಿ ರಿವಾಜುಗಳನ್ನು ದಾಖಲಿಸಿಡುವ,ವಿಕಿ ಮೂಲಕ ಸಂರಕ್ಷಿಸುವ ಅಗತ್ಯದ ಬಗ್ಗೆ ತಿಳಿಸಿದರು.

ನಂತರದ ಶುಭನುಡಿಗಳು ಪಿಲಿಕುಳದ ಶಿವರಾಮಕಾರಂತ ನಿಸರ್ಗಧಾಮದ ಕಾರ್ಯನಿರ್ವಹಣಾಧಿಕಾರಿಗಳಾದ S.Aಪ್ರಭಾಕರ ಶರ್ಮ ಅವರಿಂದ. ತದನಂತರ ಡಾ| ಯು.ಬಿ ಪವನಜ ತಮ್ಮ ತೈವಾನ್ ಪ್ರವಾಸದ ಸಂದರ್ಭದಲ್ಲಿ ಪೂರ್ಣ ಚೈನೀಸಿನ windows ನೋಡಿ ಕನ್ನಡದಲ್ಲೂ ಈ ರೀತಿ ಮಾಡಬಾರದೇಕೆ ಎಂದು ಆಲೋಚಿಸಿದ ಬಗ್ಗೆ, ವಿಕಿಪಿಡಿಯದ ಬಗ್ಗೆ ತಿಳಿಸಿದ್ದರು. ೧೯೫೨ರಲ್ಲಿ ೧೬೦೨ರಷ್ಟಿದ್ದ ಭಾಷೆಗಳಲ್ಲಿ ಈಗ ಉಳಿದಿರುವುದು ೭೦೫ ಮಾತ್ರ ! ಭಾಷೆಗಳ ಪರಿಸ್ಥಿತಿ ಇಷ್ಟು ಚಿಂತಾಜನಕವಾಗಿರೋ ಸಂದರ್ಭದಲ್ಲಿ "ಮಾಹಿತಿಯ ಆಗರ" ಎಂಬಂತಾಗಿರೋ ಕನ್ನಡಕ್ಕೆ ವಿಕಿ ಏಕೆ ಮತ್ತು ಹೇಗೆ ನೆರವಾಗಬಹುದು,ಅದರ ಸದ್ಯದ ಸ್ಥಿತಿಗತಿಗಳೇನು ಎಂಬುದರ ಬಗ್ಗೆ ತಿಳಿಸಿದರು.

ವಿಕಿಯ ಬಗ್ಗೆ:

ಜನವರಿ ೧೫ ರಂದು ಶುರುವಾದ ವಿಕಿ ಈಗ ೩೦೦ ಭಾಷೆಗಳಲ್ಲಿ ಲಭ್ಯವಿದೆ. ೨೦೦೩ ಜೂನ್ ಮೂರರಂದು ಕನ್ನಡ ವಿಕಿಯ ಪ್ರಾರಂಭ. ಇಲ್ಲಿಯವರೆಗೆ ಬೆಂಗಳೂರು, ಮೈಸೂರು, ಮಂಗಳೂರು, ಸಾಗರದಲ್ಲಿ ಆದ ಸಂಪಾದನೋತ್ಸವಗಳ ಬಗ್ಗೆ, ಅದರಲ್ಲಿ ರಚನೆಯಾದ ಪುಟಗಳ ಬಗ್ಗೆ, ಜನರ ಭಾಗವಹಿಸುವಿಕೆಯ ಬಗ್ಗೆ ತಿಳಿಸಿದರು. ಮಾತನಾಡುವವರ ಲೆಕ್ಕದಲ್ಲಿ ೩೫ ನೇ ಸ್ಥಾನದಲ್ಲಿರೋ ಕನ್ನಡದ ವಿಕಿಗೆ ಪ್ರತೀ ಘಂಟೆಗೆ ೮೯೨ ಭೇಟಿಗಳು ಸಿಗುತ್ತಿವೆ. ೧೫ ವರ್ಷಗಳಲ್ಲಿ ಇಂಗ್ಲಿಷ್ ವಿಕಿಯಲ್ಲಿ ಸೃಷ್ಠಿಯಾಗಿರೋ ಲೇಖನಗಳ ಸಂಖ್ಯೆ ೫೦ ಲಕ್ಷ ದಾಟಿದ್ದರೆ ೧೩ ವರ್ಷದ ಕನ್ನಡ ವಿಕಿ ಲೇಖನಗಳ ಸಂಖ್ಯೆ ೧೯,೬೦೦. ಎಲ್ಲಾ ಭಾಷೆಗಳ ಪಟ್ಟಿಯಲ್ಲಿ ೧೦೭ನೇ ಸ್ಥಾನದಲ್ಲಿರೋ ಕನ್ನಡ ವಿಕಿ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ ಎಂಬ ವಿಕಿಯ ಬಗೆಗಿನ ಅಂಕಿಅಂಶಗಳು ಕಾರ್ಯಕ್ರಮದಲ್ಲಿ ನೆರೆದವರಿಗೆ ತಿಳಿಯಲ್ಪಟ್ಟವು. ಕಾರ್ಯಕ್ರಮಕ್ಕೆ ನೆರೆದಿದ್ದವರಿಗೆಲ್ಲಾ ಧನ್ಯವಾದಗಳನ್ನು ಸಮರ್ಪಿಸಿದ್ದು ಡಾ| ಸರಸ್ವತಿ ಅವರು.

೧೧:೪೦ ಕ್ಕೆ ಪ್ರಾತ್ಯಕ್ಷಿಕೆಗಳ ಎರಡನೇ session ಆರಂಭವಾಯಿತು. ಇದರಲ್ಲಿ ವಿಕಿಪೀಡಿಯ ಲೇಖನಗಳ ಬಗ್ಗೆ, ಅದರ ಸಂಪಾದನೆಯ ಬಗ್ಗೆ, ಖಾತೆ ತೆರೆಯುವುದೇ ಮೊದಲಾದ ಮಾಹಿತಿಗಳ ಬಗ್ಗೆ, ಯೋಜನೆಗಳ ಬಗ್ಗೆ ಪವನಜ ಅವರು ನೆರೆದವರಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು

 

೧೨:೪೦ ಕ್ಕೆ Creative common, license ಗಳ ಬಗ್ಗೆ ವಿಕಿಪೀಡಿಯ ಸಂಪಾದಕರಲ್ಲೊಬ್ಬರಾದ ರೆಹಮಾನುದ್ದೀನ್ ಶೇಖ್ ಅವರಿಂದ ಪ್ರಾತ್ಯಕ್ಷಿಕೆ ಇತ್ತು.
ಕ್ರಿಯೇಟಿವ್ ಕಾಮನ್ಸ್ ನ Attribution, no derivative, non commercia, sharealike ಎಂಬ ಅಂಶಗಳ ಬಗ್ಗೆ ತಿಳಿಸಿದ ರೆಹಮಾನುದ್ದೀನ್ ಅವರು ೬ ತರದ ಲೈಸನ್ಸುಗಳ ಬಗ್ಗೆ ತಿಳಿಸಿದರು. ಅವುಗಳೆಂದರೆ
೧) cc by A --> attribute
2) cc by S --> share alike
3)cc by ND --> no derivative
4)cc by NC --> non commercial
5)non commerical, share alike(CC by SA)
6)non commercial, no derivative
ವಿಕಿಪೀಡಿಯದಲ್ಲಿ ಫೋಟೊಗಳನ್ನು ಬಳಸಬೇಕಾದರೆ ಉಪಯೋಗಿಸಬೇಕಾದ creativecommonsತಾಣದ ಬಗ್ಗೆ ತಿಳಿಸಿದ ಅವರು ವಿಕಿಪಿಡಿಯಕ್ಕೆ ಯಾವ ತರಹದ ಫೋಟೋಗಳನ್ನು ಬಳಸಬಹುದು, ಯಾವುದನ್ನು ಬಳಸಬಾರದು ಎಂಬ ನಿಯಮಗಳನ್ನು ತಿಳಿಸಿದರು. ವಿಕಿಪೀಡಿಯದಲ್ಲಿರೋ ಫೋಟೋಗಳನ್ನು ಬಳಸಿಕೊಳ್ಳುವಾಗ ಫೋಟೋ ಬಳಸಿಕೊಳ್ಳಬಹುದು, ಆದರೆ ವಿಕಿಯಿಂದ ತೆಗೆದುಕೊಂಡದ್ದು, ಇಂಥವರ ಫೋಟೋ ಎಂದು ಹೇಳಬೇಕು ಎಂಬುದೇ ಮೊದಲಾದ ಲೈಸನ್ಸ್ ಗೆ ಸಂಬಂಧಪಟ್ಟ ನಿಯಮಗಳನ್ನು ತಿಳಿಸಿದರು.
ಬೆಳಗಿನ ಕಾರ್ಯಕ್ರಮದ ಕೊನೆಯ ಅಂಕದಲ್ಲಿ ವಿಕಿಪೀಡಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಧಾತನಯ, ವಸಂತಕುಮಾರ್,ಬಿ.ಎಸ್.ಚಂದ್ರಶೇಖರ್, ಓಂ ಶಿವಪ್ರಕಾಶ್,ಹರೀಶ್ , ತೇಜಸ್ ಮುಂತಾದ ಸಂಪಾದಕರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು. ಹೊರ ಊರಿನಿಂದ ಬಂದ ಸಂಪಾದಕರಾದ ಅನಂತ್ ಸುಬ್ರಾಯ್ ,ಚಿರಾಗ್ ಸಾರ್ಥಿ ಮತ್ತಿತರರಿಗೆ ಪ್ರೇಮಿಗಳ ದಿನದ ಸಂಕೇತವಾದ ಗುಲಾಬಿಯನ್ನಿತ್ತು ಅಭಿನಂದಿಸಲಾಯಿತು :-)
ನಂತರದ ಭಾಗ ವಿಕಿಪೀಡಿಯನ್ನರ ನುಡಿಗಳು. ಇದರ ಅಂಗವಾಗಿ ಕೆಳಕಂಡ ವಿಕಿಪೀಡಿಯನ್ನರು ವಿಕಿಪೀಡಿಯದ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು
೧)ಕ್ರೈಸ್ಟ್ ಕಾಲೇಜಿನ ಕನ್ನಡ ವಿಕಿಪೀಡಿಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಡಾ| ಶಿವಪ್ರಸಾದ್
೨)ಮೈಸೂರು ವಿಶ್ವವಿದ್ಯಾಲಯದ, ಮೈಸೂರು ಸಂಪಾದನೋತ್ಸವದ ಸಂಚಾಲಕರಾಗಿದ್ದ ಡಾ| ಸೌಭಾಗ್ಯವತಿ
೩)ಸಾಗರದ ಸಂಜಯ ಗಾಂಧಿ ಕಾಲೇಜಿನ, ಸಾಗರ ಸಂಪಾದನೋತ್ಸವದ ಸಂಚಾಲಕರಾಗಿದ್ದ ವಿದ್ಯಾಧರ ಚಿಪ್ಳಿ
೪)ಸಂತ ಆಗ್ನೆಸ್ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಕವಿತಾ
೫)ಭಾರತೀಯ ಗೋತಳಿಗಳ ವಿಕಿ ಯೋಜನೆಯಲ್ಲಿ, ಸಾಗರ ಸಂಪಾದನೋತ್ಸವದ ಸಹಸಂಚಾಲಕರಾಗಿದ್ದ ವಿಕಾಸ್ ಹೆಗಡೆ
೬)ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿ ತ್ರಿವೇಣಿ
೭)ಸಂತ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿನಿ ಮಮತಾ ಅವರು
೮)ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ
೯)ಉಜಿರಿಯ SDM ಕಾಲೇಜಿನ ವಿದ್ಯಾರ್ಥಿಗಳಾದ ಆಂಜನೇಯ ಮತ್ತು ಮಂಜುನಾಥ
೧೦)ಮಂಗಳೂರಿನ ರಾಮಕೃಷ್ಣ ಪಿ.ಯು ಕಾಲೇಜಿನ ಉಪನ್ಯಾಸಕ ನಟೇಶ್ ಆಳ್ವ
೧೧)ಮುಕ್ತ ತಂತ್ರಾಶಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, it for change,openstreetmap NGO ಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಯೋಗೀಶ್
೧೨)openstreetmapನಲ್ಲಿ ತೊಡಗಿಸಿಕೊಂಡಿರುವ ಶ್ರೀವಿದ್ಯಾ ಅವರು
೧೩)ಕೊನೆಯದಾಗಿ ನನಗೂ ಒಂದಿಷ್ಟು ಮಾತನಾಡೋ ಅವಕಾಶ !
ಮಧ್ಯಾಹ್ನ ಭೋಜನಾನಂತರ ಸಂತ ಅಲೋಶಿಯಸ್ ಕಾಲೇಜಿನ ಐಟಿ ಲ್ಯಾಬಿನಲ್ಲಿ ಸಂಪಾದನೋತ್ಸವ ನಡೆಯಬೇಕಿತ್ತು. ಆದರೆ ಅಂತರ್ಜಾಲ ಸಂಪರ್ಕ ವ್ಯತ್ಯಯದ ಕಾರಣದಿಂದ ಅದರ ಬದಲಿ ಕಾರ್ಯಕ್ರಮ ಸಭಾಂಗಣಕ್ಕೆ ಸ್ಥಳಾಂತರಗೊಂಡಿತು. ರೆಹಮಾನುದ್ದೀನ್ ಅವರಿಂದ ಉತ್ತಮ ವಿಕಿ ಲೇಖನ ಹೇಗಿರಬೇಕು, ಇರುವ ಲೇಖನವನ್ನು ಬಾಹ್ಯ ಕೊಂಡಿ, info document ,ಚಿತ್ರಗಳನ್ನು ಹಾಕುವ ಮೂಲಕ ಹೇಗೆ ಉತ್ತಮಪಡಿಸುವುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ನೆರೆದಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಪಿಲಿಕುಳದಲ್ಲಿ ತೆಗೆದಿದ್ದ ಚಿತ್ರಗಳನ್ನು ಪಿಲಿಕುಳ ಎಂಬ ವರ್ಗಕ್ಕೆ ಸೇರಿಸಿ ಲೇಖನಗಳನ್ನು ಹೇಗೆ ತಯಾರಿಸಬಹುದು ಎಂಬುದರ ಬಗ್ಗೆಯೂ ವೇದಿಕೆಯಲ್ಲೇ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲಾ ಭಾಗವಹಿಸುವಿಕೆಯ ಪ್ರಮಾಣಪತ್ರ , ಕಾಲೇಜುಗಳಿಗೆ ವಿಕಿಪೀಡಿಯದ ಪೆನ್ ಡ್ರೈವ್ ನೀಡಲಾಯಿತು. ಸಂಜೆ ನಾಲ್ಕರ ಸುಮಾರಿಗೆ ಕಾರ್ಯಕ್ರಮ ಮುಗಿಸಿ ಹೊರಬಂದರೂ ಇನ್ನೂ ಆ ವೇದಿಕೆಯ ನೆನಪು ಮನದಲ್ಲಿ ಸುಳಿಯುತ್ತಲೇ ಇದೆ. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ವಿಕಿಪೀಡಿಯನ್ನರ ನುಡಿಗಳು ಕಿವಿಯಲ್ಲಿ ಅನುರಣಿಸುತ್ತಲೇ ಇದೆ.